Saturday, May 16, 2009

ಸೋನಿಯಾ ವ್ಯಕ್ತಿತ್ವಕ್ಕೆ ಸಂದ ಗೌರವ ಈ ಫಲಿತಾಂಶ


ಮತ್ತೆ ಯುಪಿಎ ಸರ್ಕಾರ. ಕಾಂಗ್ರೆಸ್ ಈ ದೇಶದಲ್ಲಿ ಅದೆಷ್ಟು ಬೇರು ಬಿಟ್ಟಿದೆ ಅನ್ನೋದಕ್ಕೆ 2009ರ ಲೋಕಸಭಾ ಚುನಾವಣೆ ಒಂದು ಉದಾಹರಣೆ. ದೆಹಲಿ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಕೈ ಕಮಾಲ್ ತೋರಿದೆ. ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ಅದರ ಈ ಸಲದ ಸಾಧನೆ ಗಮನಾರ್ಹ. ಇಲ್ಲಿ ನೆಲೆಯನ್ನೇ ಕಳೆದುಕೊಂಡಂತಿದ್ದ ಕಾಂಗ್ರೆಸ್ ಮತ್ತೆ ಮೈ ಕೊಡವಿ ಎದ್ದು ನಿಂತಿದೆ.
ಸೋನಿಯಾ ತುಂಬ ಸಂಯಮ ವಹಿಸಿ, ಶಾಂತ ಚಿತ್ತದಿಂದ ದೇಶವನ್ನು ಮುನ್ನಡೆಸಿಕೊಂಡು ಹೋಗಿದ್ದು ಬಹುಮುಖ್ಯ ವಿಚಾರ. ತಮ್ಮ ಇತಿ ಮಿತಿಯ ರಾಜಕೀಯ ಅನುಭವದಲ್ಲಿ ಬಹುಶಃ ಈ ಹಿಂದೆ ಯಾವ ರಾಜಕಾರಣಿಯೂ ತೋರದ ಮುತ್ಸದ್ದಿತನ ಮೆರೆದರು. ಮನಮೋಹನ್ ಸಿಂಗ್ ಎನ್ನುವ ಸಾತ್ವಿಕ ಮನುಷ್ಯನನ್ನು ಪ್ರಧಾನಿ ಕುರ್ಚಿ ಮೇಲೆ ಕೂರಿಸಿ ಹಿಂದೆ ತಾವೇ ನಿಂತು ಎಲ್ಲವನ್ನು ಸುಸೂತ್ರವಾಗಿ ನಿಭಾಯಿಸಿದರು. ಮನೆಯ ಹಿರಿಯ ಮಗಳು ಇಡೀ ಮನೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುತ್ತಾಳಲ್ಲ, ಹಾಗೆ ದೇಶವನ್ನು ಮುನ್ನಡೆಸಿದರು.
ಕಾಂಗ್ರೆಸ್ ಬಗ್ಗೆ ಜನರಿಗೆ ಒಲವು ಇನ್ನೂ ಮಾಸಿಲ್ಲ, ಆದರೆ ಅದಕ್ಕೂ ಹೆಚ್ಚಾಗಿ ಸೋನಿಯಾ ವ್ಯಕ್ತಿತ್ವ ಈಗ ಎಲ್ಲರಿಗೂ ಒಪ್ಪಿಗೆಯಾಗಿದ್ದಕ್ಕೆ ಸಾಕ್ಷಿಯಂತೆ ಈ ಫಲಿತಾಂಶ ಬಂದಿದೆ. ಮನಮೋಹನ್ ಸಿಂಗ್ ಅವರ ಕ್ಲೀನ್ ವ್ಯಕ್ತಿತ್ವ, ಹಗರಣಗಳೇ ಇಲ್ಲದ ಒಂದು ಪೂರ್ಣಾವಧಿ ಅಧಿಕಾರ ನಿಭಾಯಿಸಿದ್ದು ಮತದಾರರಿಗೆ ಇಷ್ಟವಾಗಿದೆ. ಯಾವುದೇ ಅಂಥ ಅಹಿತಕರ ಗಲಭೆಗಳು ನಡೆಯದಂತೆ, ಅಕ್ರಮಗಳು ಜರುಗದಂತೆ ಎಚ್ಚರ ವಹಿಸಿದ್ದು ಯುಪಿಎ ಸಾಧನೆ. ಅದನ್ನೇ ಜನತೆ ಪರಿಗಣಿಸಿದ್ದಾರೆ.
ಅಮೆರಿಕ ಜತೆಗಿನ ಸಂಬಂಧ ಮತ್ತು ಅಣ್ವಸ್ತ್ರ ಒಪ್ಪಂದಕ್ಕೆ ಸಂಬಂಧಿಸಿದಂತೆ 123 ಷರತ್ತುಗಳಿಗೆ ತಲೆಬಾಗಿದ ಯುಪಿಎ ಒಂದು ದೊಡ್ಡ ತಪ್ಪನ್ನೇ ಮಾಡಿತ್ತು. ಈ ವಿಷಯದಲ್ಲಿ ಎಡರಂಗ ತರಾಟೆಗೆ ತೆಗೆದುಕೊಂಡಿದ್ದು ಮತ್ತು ಅದನ್ನು ವಿರೋಧಿಸಿದ್ದು ಸೂಕ್ತವೇ ಆಗಿತ್ತು. ಮುಂಬೈ ಸ್ಫೋಟ ಪ್ರಕರಣದಂಥ ವ್ಯವಸ್ಥಿತ ಪಿತೂರಿಗಳಿಗೂ ಮತದಾರ ಬೆಲೆ ಕೊಡಲಿಲ್ಲ. ಅಥವಾ ಅದಾವುದನ್ನೂ ಮತದಾರ ಗಂಭೀರವಾಗಿ ತೆಗೆದುಕೊಂಡಿಲ್ಲ. ಎಡರಂಗ ನಂದಿಗ್ರಾಮದ ಗೊಲೀಬಾರ್ ಗೆ ದೊಡ್ಡ ಬೆಲೆ ತೆತ್ತಿತು. ಪಶ್ಚಿಮ ಬಂಗಾಳದಲ್ಲಿ ಹತಾಶ ಹೆಣ್ಣು ಮಮತಾ ಬ್ಯಾನರ್ಜಿಯ ಕಮ್ಯುನಿಸ್ಟ್ ಸರ್ಕಾರದ ಮೇಲಿನ ದ್ವೇಷದ ಹೆಗಲ ಮೇಲೆ ಕೂತು ಸೇಡು ತೀರಿಸಿಕೊಳ್ಳುವ ಆಯ್ಕೆ ಮಾಡಿದ ಕಾಂಗ್ರೆಸ್ ಅಂದುಕೊಂಡ ಆಟ ಆಡಿತು.

ಕಮ್ಯುನಿಸ್ಟರನ್ನು ಹ್ಯಾಗೆ ಸದೆ ಬಡಿಯಬೇಕು ಎನ್ನುವುದನ್ನು ಕಾಂಗ್ರೆಸ್ಸ್ಇಗರು ಇಂದಿರಾ ಕಾಲದಿಂದಲೇ ಚೆನ್ನಾಗಿ ಬಲ್ಲವರು. ಹೀಗೆ ಹಳೆಯ ತಲೆಗಳ ರಾಜಕೀಯ ಲೆಕ್ಕಾಚಾರ, ರಾಹುಲ್, ಸಚಿನ್ ಪೈಲಟ್ ರಂಥ ಹೊಸ ಹುರುಪಿನ ಹುಡುಗರ ಹೊಸ ಕನಸು.. ಎರಡನ್ನೂ ಸರಿಯಾಗಿ ನಿಭಾಯಿಸಿದ ಸೋನಿಯಾ ಗಾಂಧಿ ಎಲ್ಲರ ಮೆಚ್ಚುಗೆಗೆ, ಪ್ರೀತಿಗೆ ಪಾತ್ರರಾದರು. ಸೋನಿಯಾ ಮಾಡಿದ ಾಯ್ಕೆ ಮನಮೋಹನ್ ಸಿಂಗ್ ಅವರನ್ನು ಇಡೀ ದೇಶವೇ ಒಪ್ಪಿಕೊಂಡಿತು. ವಿದೇಶಿ ಮಹಿಳೆ ಎಂಬ ಹಣೆಪಟ್ಟಿ ಕಿತ್ತು ಬೀಸಾಕಿದ ಜನತೆ, ಸೋನಿಯಾರನ್ನು ತಮ್ಮ ನಾಯಕಿ ಎಂದು ಒಪ್ಪಿಕೊಂಡಿತು. ಈ ಅಂಶಗಳು ಕಾಂಗ್ರೆಸ್ ಕಡೆಗೆ ಮತ್ತೆ ತಿರುಗಿ ನೋಡುವಂತಾಯಿತು. ಹೊಸ ಸರ್ಕಾರದ ಮುಂದಿನ ಸವಾಲುಗಳು ಎಂದಿನಂತೆ ಇದ್ದೇ ಇರುತ್ತವೆ. ಮನಮೋಹನ್ ಎಷ್ಟು ಕಾಲ ಜತೆಯಲ್ಲಿದ್ದವರನ್ನು ವಿಶ್ವಾಸದಿಂದ ಕೊಂಡೊಯ್ಯುತ್ತಾರೊ ಅಲ್ಲಿಯತನಕ ಯಾವ ತೊಂದರೆ ಇಲ್ಲದೇ ಆಡಳಿತ ನಡೆಸುತ್ತಾರೆ. ಮತ್ತೊಂದು ಅವಧಿಯವರೆಗೆ ಸಿಂಗ್ ಕುರ್ಚಿ ಮೇಲಿರುವರೇ? ಅವರ ಆರೋಗ್ಯ ಸ್ಥಿತಿ ಮತ್ತು ಮಹಾತ್ವಾಕಾಂಕ್ಷಿ ಇತರ ನಾಯಕರ ಸಂಯಮದ ಸ್ಥಿತಿ ಮೇಲೆ ಅವಲಂಬಿಸಿದೆ. ಆದರೆ ಮತ್ತೊಂದು ನಿರುಪದ್ರವಿ ಸರ್ಕಾರ ಕೇಂದ್ರದಲ್ಲಿ ಬರುತ್ತಿದೆ ಎನ್ನುವುದು ಸಮಾಧಾನಕರ.