ನೀವು ಸಾವಿನ ರಹಸ್ಯ ತಿಳಿಯಲು ಶೋಧನೆ ನಡೆಸಬಹುದು.
ಆದರೆ, ಆತ್ಮಶೋಧನೆ ಇಲ್ಲದೇ ಮೃತ್ಯುವಿನ ದರುಶನ ಹೇಗಾದೀತು?
ಇರುಳಿಗೆ ಬದ್ಧ ಗೂಬೆ ಕಣ್ಣುಗಳು ಹಗಲು ತೆರಕೊಳ್ಳುವುದೇ ಇಲ್ಲ,
ಬೆಳಕಿನ ಬಣ್ಣಗಳ ರಹಸ್ಯವ ಅದು ಹೇಗೆ ಪ್ರಕಟಿಸೀತು...!
ನಿಮಗೆ ಮೃತ್ಯುವಿನ ನಿಜಸ್ವರೂಪದ ದರುಶನವಾಗಬೇಕೆ?
ಹಾಗಿದ್ದರೆ ತೆರೆದುಕೊಳ್ಳಲಿ ನಿಮ್ಮ ಹೃದಯ ಅನಂತದವರೆಗೆ,
ಅದು ಲೀನವಾಗಲಿ ಬದುಕಿನ ಶರೀರದೊಳಗೆ...
ಏಕೆಂದರೆ ನದಿ ಮತ್ತು ಸಾಗರದಂತೆ, ಬದುಕು ಮತ್ತು ಮೃತ್ಯುವೂ ಅಭಿನ್ನ.
ನಿಮ್ಮ ಆಸೆ, ಆಕಾಂಕ್ಷೆಗಳ ಆಳದಲ್ಲೇ ಪರಲೋಕದ ಮೌನ ಚೇತನ ಮಿಸುಕಾಡುತ್ತಿರುತ್ತದೆ.
ಮತ್ತು ನಿಮ್ಮ ಹೃದಯ, ಮಂಜಿನೊಳಗೆ ಹೂತ ಬೀಜದಂತೆ
ವಸಂತದ ಕನಸು ಕಾಣುತ್ತಿರುತ್ತದೆ.
ಇಂಥ ಕನಸುಗಳ ಮೇಲೆ ನಂಬಿಕೆಯಿಡಿ; ಏಕೆಂದರೆ, ಇಲ್ಲೇ ಅಡಗಿದೆ ದ್ವಾರ,
ಅನಂತದೆಡೆಗೆ ತೆರಕೊಳ್ಳುವ ಹಾದಿಗೆ!
ಸಾಯುವುದರರ್ಥ, ಗಾಳಿಯಲ್ಲಿ ಲೀನವಾಗುವುದು, ಬಿಸಿಲಲ್ಲಿ ಕರಗುವುದು ಎಂದೇ ಅಲ್ಲವೇ?
ನಿಮ್ಮ ಪ್ರಾಣವಾಯುವಿಗೆ ಅಶಾಂತ ಬಿರುಗಾಳಿಯಿಂದ ಮುಕ್ತಿ ಸಿಗುವುದು,
ಮತ್ತು ಎತ್ತರೆತ್ತರಕ್ಕೆ ಏರಿ ವಿಸ್ತಾರ ಪಡಕೊಳ್ಳುತ್ತ ಮುಕ್ತಿಮಾರ್ಗ ಹಿಡಿದು
ಸೃಷ್ಟಿಕರ್ತನ ಸೇರಿಕೊಳ್ಳುವುದು... ಇಷ್ಟೇ ಅಲ್ಲವೇ ಉಸಿರು ಸ್ತಬ್ದವಾಗುವುದರರ್ಥ?
ಪ್ರಶಾಂತ ನದಿಯ ಜಲ ಕುಡಿದಾಗಲೇ ನೀವು ನಿಜವಾಗಲೂ ಹಾಡೋದು!
ಶಿಖರ-ಪರ್ವತಗಳ ತುದಿ ತಲುಪಿದ ಮೇಲೇ ನಿಜವಾದ ಆರೋಹಣ ಶುರುವಾಗೋದು...
ಭೂಮಿ ಪ್ರತಿ ಅಂಗಾಂಗಗಳ ತಟ್ಟಿದಾಗಲೇ ನಿಮ್ಮ ನಿಜವಾದ ನೃತ್ಯ ಶುರುವಾಗೋದು...!
-ದಿಲಾವರ್
ಮೂಲ: ಖಲೀಲ್ ಗಿಬ್ರಾನ್.
'ಮಂಡೆ ಬಿಸಿ' ಮಾಡುವ ಟಿವಿ ಜನ ಮತ್ತು ಗಿಬ್ರಾನ್ ಸಾಲುಗಳ ನೆನಪು...
ನಮ್ಮ ಮಾಧ್ಯಮ ಜಗತ್ತು ಸಾವಿನಂಥ ವಾರ್ತೆಯನ್ನೂ ಬಿಕರಿಗೆ ಬಳಸಿಕೊಳ್ಳುವುದನ್ನು ಕಂಡಾಗ ದಿಲ್ ನಾರಾಜ್ ಆಯ್ತು. ಈ ವರ್ಷದ ಕೊನೆಯ ಮೂರು ದಿನಗಳಲ್ಲಿ (28, 29, 30) ರಾಜ್ಯದ ಜನತೆಗೆ ಮೃತ್ಯು ಎನ್ನುವುದು ಯಾಕೊ ಕಸಿವಿಸಿ ಮೂಡಿಸಿತು. ಜನಪ್ರಿಯತೆಯನ್ನೇ ನೆಚ್ಚಿ ಬದುಕಿದ್ದ ಇಬ್ಬರು ಗ್ಲ್ಯಾಮರ್ ಜಗದ ತಾರೆಯರು (ಗಾಯಕ ಸಿ. ಅಶ್ವಥ್ ಮತ್ತು ನಟ ವಿಷ್ಣುವರ್ಧನ್) ಇದೇ ಅವಧಿಯಲ್ಲಿ ಇಹಲೋಕ ತ್ಯಜಿಸಿದರು.
ಅವರ ಬಗ್ಗೆ ಅಭಿಮಾನ ಮತ್ತು ಅವರು ಪ್ರತಿನಿಧಿಸುತ್ತಿದ್ದ ಕಲೆಯ ಮೂಲಕ ನೀಡಿದ ಮನರಂಜನೆಯನ್ನು 'ಅಮಲಾಗಿಸಿಕೊಂಡಂತಿದ್ದ ಅಭಿಮಾನಿ' (ಎಲ್ಲರೂ ಅಲ್ಲ) ಬಳಗದ ಪ್ರೀತಿ ಮತ್ತು ಹುಚ್ಚಾಟಗಳನ್ನೇ ಟಿವಿ ಮಾಧ್ಯಮ ದೊಡ್ಡದು ಮಾಡಿ, ಇಡೀ ದಿನ ಬಿಟ್ಟೂ ಬಿಡದೇ ಅದನ್ನೇ ಬಿತ್ತರಿಸಿದ್ದು ಅತಿರೇಕವೆನಿಸಿತು. ನಡುವೆ ಲಾಭ ತಂದುಕೊಡಬಲ್ಲ ಜಾಹೀರಾತುಗಳ ಭಾರಿ ಪೈಪೋಟಿ.
ಮುಗ್ಧ ಜನರಿಗೆ ಅನಗತ್ಯವಾಗಿ ಈ ವಿಷಯಗಳ ಹುಚ್ಚು ಹಿಡಿಸುವಂಥ, ಅವರನ್ನು ಪ್ರವೋಕ್ ಮಾಡುವಂಥ ಮತ್ತು ಬೇಕೆಂದೇ ಸೆನ್ಸೇಷನ್ ಹುಟ್ಟು ಹಾಕುವಂಥ ಟಿವಿ ಮಾಧ್ಯಮಗಳ ಪ್ರವೃತ್ತಿ ಈಗ್ಯಾಕೊ ಅತಿಯಾಗುತ್ತಿದೆ. ಮತ್ತು ಇಲ್ಲಿ ಸಾಯುವ ವ್ಯಕ್ತಿಯ ಜಾತಿ, ಧರ್ಮ, ಪ್ರದೇಶವೂ ಮುಖ್ಯವಾಗುತ್ತಿರುವುದು ಇನ್ನೂ ಅಸಹ್ಯದ ಸಂಗತಿ. ಬೇಕೆಂದೇ ಕೆಲವರ ವೈಭವೀಕರಣ, ಮತ್ತವರ ನಂಬಿಕೆ, ಆಚರಣೆ, ಸಿದ್ಧಾಂತಗಳ ಅನಗತ್ಯ ಪ್ರಚಾರ, ಕೆಲವರ ಬಗ್ಗೆ ಉದ್ದೇಶಪೂರ್ವಕ ಎನಿಸದಂತೆಯೂ ಉದ್ದೇಶಪೂರ್ವಕವಾಗೇ ಮಾಡುವ ಕ್ಯಾರೆಕ್ಟರ್ ಅಸ್ಯಾಸಿನೇಷನ್, ಇನ್ನು ಕೆಲವರ ನೆಗ್ಲೆಕ್ಟ್ ಮಾಡುವ ಯತ್ನಗಳು ಅಸಹ್ಯ ಹುಟ್ಟಿಸುತ್ತಿವೆ.
ಇದೆಲ್ಲ ಯೋಚಿಸಿ ದಿಲ್ ಯಾಕೊ ಬೇಸರಗೊಂಡಿತು. ಲೆಬೆನಾನ್ ನ ದಾರ್ಶನಿಕ ಕವಿ ಖಲೀಲ್ ಗಿಬ್ರಾನ್, ಸಾವಿನ ಮತ್ತು ಒಟ್ಟಾರೆ ಮನುಷ್ಯ ಬದುಕಿನ ಸಾರದ ಬಗ್ಗೆ 'ಪ್ರೊಫೆಟ್' ಪುಸ್ತಕದಲ್ಲಿ ಬರೆದ ಸಾಲುಗಳು ನೆನಪಾದವು. ಅವನ ಆ ಸಾಲುಗಳನ್ನು ನಾನು ಮೇಲಿನಂತೆ ಅರ್ಥಮಾಡಿಕೊಂಡೆ ಅಷ್ಟೇ.
Wednesday, December 30, 2009
Wednesday, December 16, 2009
Subscribe to:
Comments (Atom)



