ಯಡಿಯೂರಪ್ಪ ಕೇವಲ ಲಿಂಗಾಯತರನ್ನಿಟ್ಟುಕೊಂಡು ರಾಜ್ಯಭಾರ ನಡೆಸಲು ಹವಣಿಸುವುದು ಬಹು ಬೇಗ ಜನತೆಗೆ ಅರ್ಥವಾಗಿಬಿಟ್ಟಿತು. ಮಠಗಳನ್ನು ಗಮನದಲ್ಲಿಟ್ಟುಕೊಂಡು ಇಡೀ ಸಮುದಾಯದ ದ್ರುವೀಕರಣಕ್ಕೆ ಯತ್ನಿಸಿದರು. ಈ ಭರಾಟೆಯಲ್ಲಿ ತಮಗೆ ಬೆಂಗಾವಲಾಗಿ ನಿಂತ ಗಣಿ ಧಣಿಗಳ ಉಪಕಾರವನ್ನೇ ಮರೆತರು. ರೆಡ್ಡಿ ನಾಯಕರನ್ನು, ನಾಯಕ ಸಮಾಜದವರನ್ನು ಹೇಗಾದರೂ ನಿಭಾಯಿಸಬಹುದು ಎನ್ನುವ ಅವರ ಲೆಕ್ಕಾಚಾರ ತಲೆಕೆಳಗಾಯಿತು.
ಸಂಘ ಪರಿವಾರದ ಕೆಂಗಣ್ಣಿಗೂ ಯಡಿಯೂರಪ್ಪ ಗುರಿಯಾದರು. ಬಿಜೆಪಿಯಲ್ಲಿನ ಬ್ರಾಹ್ಮಣರನ್ನು ಕಡೆಗಣಿಸಲಾಯಿತೆನ್ನುವ ವ್ಯವಸ್ಥಿತ ಪುಕಾರಿಗೆ ಮಾಧ್ಯಮಗಳ ಪರೋಕ್ಷ ಸಹಾಯವೂ ದೊರಕಿತು. ಹಿಂದೂತ್ವದ ಹೂಂಕಾರ ಎತ್ತಲೆಂದು ಯಡಿಯೂರಪ್ಪ ಅವರನ್ನು ಬಳಸಿಕೊಂಡ ಸಂಘ ಪರಿವಾರಕ್ಕೆ ಒಂದು ರೀತಿಯ ಆಘಾತಕಾರಿ ಬೆಳವಣಿಗೆ ಇದು. ಹಿಂದೂ ಸಂಘಟನೆ ಬಿಟ್ಟು ಅದರಿಂದ ಶತಮಾನಗಳ ಹಿಂದೆ ಹೊರಬಂದ ಬಸವಣ್ಣನ ಅನುಯಾಯಿಗಳ ವೀರಶೈವ ಧರ್ಮ ಸಂಘಟನೆಗೆ ನಿಂತರು ಯಡಿಯೂರಪ್ಪ. ಈ ಯತ್ನ ಸಂಘ ಪರಿವಾರದ ಕೆಂಗಣ್ಣಿಗೆ ಗುರಿಯಾಗಲು ಪ್ರಮುಖ ಕಾರಣ. ಅನಂತಕುಮಾರ್ ಮತ್ತಿತರ ಬ್ರಾಹ್ಮಣ ನಾಯಕರ ಹಿಂದೂತ್ವದ ಜಪಕ್ಕೆ ಬಿಜೆಪಿ ಪಾಳಯದಲ್ಲಿ ಕವಡೆ ಕಿಮ್ಮತ್ತೂ ಇರಲಿಲ್ಲ. ಈ ಗ್ಯಾಂಗ್ ಕೂಡ ಶಾಕ್ ಕೊಡಲು ಹೊಂಚು ಹಾಕುತ್ತಲೇ ಇದೆ.
ಇನ್ನು ರೆಡ್ಡಿ ಬಳಗ, ಅದಿರು ಲಾರಿಗೆ ವಿಧಿಸಿದ ಭಾರಿ ಸುಂಕ ತೆರಿಗೆಯಿಂದ ತಮ್ಮ ವ್ಯವಹಾರಕ್ಕೆ ಕಲ್ಲು ಬೀಳುತ್ತದೆಂದು ಕಂಗಾಲಾಗಿದೆ. ಸಿಎಂ ಗೆ ಮತ್ತು ಪಾರ್ಟಿಗೆ ಬೇಕಾದಾಗ ದುಡ್ಡು, ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದ ರೆಡ್ಡಿಗಳಿಗೆ ಭಾರಿ ತೆರಿಗೆ ವಿಧಿಸುವ ತಂತ್ರ ತಲೆಬಿಸಿ ತಂದಿದೆ. ಸಿಎಂ ವಿರುದ್ಧ ತಿರುಗಿ ಬೀಳಲು ಇದಕ್ಕಿಂತ ಉತ್ತಮ ಅವಕಾಶ ಬೇಕಾ?
ಅತ್ತ ನಾಯಕ ಸಮುದಾಯದ ಸಚಿವರು, ಸದಸ್ಯರು ರಾಜಕೀಯ ದಾಳ ಎಸೆಯುವುದಕ್ಕೆ ಸಜ್ಜಾಗಿ ನಿಂತಿದ್ದಾರೆ. ರೆಡ್ಡಿಗಳು ಪರಿಹಾರ ಕಾರ್ಯಕ್ಕೆಂದು ತಾವೇ ಸ್ವತಃ ಐವತ್ತು ಸಾವಿರ ಮನೆ ಕಟ್ಟಿಸಿಕೊಡುವ ನಿರ್ಧಾರಕ್ಕೆ ಬಂದಿದ್ರು. ಈ ಸಂಬಂಧ ಯಡಿಯೂರಪ್ಪ ಅವರಿಂದ ಗ್ರೀನ್ ಸಿಗ್ನಲ್ ಪಡೆಯಲೆತ್ನಿಸಿದಾಗ ಅವರು ಗರಂ ಆಗಿದ್ದಾರೆ. ಸರ್ಕಾರಕ್ಕೇ ಮುಜುಗರ ತರುವ ಯತ್ನವಿದು ಎಂದು ಸಿಎಂ ಸಿಡಿಮಿಡಿಗೊಂಡಿದ್ದಾರೆ. ಅಷ್ಟು ಹಣ ಸರ್ಕಾರಕ್ಕೆ ಕೊಟ್ಟರೆ, ಸರ್ಕಾರವೇ ನಿಂತು ಇದನ್ನು ಮಾಡಬಹುದಲ್ಲ... ಎನ್ನುವ ಪ್ರತಿದಾಳ ಎಸೆಯಲೆತ್ನಿಸಿದ್ದಾರೆ. ಇದು ರೆಡ್ಡಿ ಬಂಧುಗಳ ಕೋಪ ನೆತ್ತಿಗೇರಲು ಕಾರಣವಾಗಿದೆ. ಹೀಗಾಗಿ ದೊಡ್ಡ ಕಲ್ಲು ಬೀಸುವ ನಿರ್ಧಾರಕ್ಕೆ ರೆಡ್ಡಿ ಗ್ಯಾಂಗ್ ಸಜ್ಜಾಗುತ್ತಿದೆ.
ಯಡಿಯೂರಪ್ಪ ಮುಂಚಿನಿಂದ ಅಗ್ರೆಸಿವ್ ನೆಸ್ ಗೆ ಒತ್ತು ಕೊಟ್ಟರು. ಅದು ಅಭಿವೃದ್ಧಿ ಮಂತ್ರಕ್ಕಷ್ಟೇ ಸೀಮಿತವಾಗಲಿಲ್ಲ. ಲಿಂಗಾಯತರ ಕ್ಷೇಮಾಭಿವೃದ್ಧಿಗಾಗಿ ಎಲ್ಲ ಮಾಡುತ್ತಿರುವುದು ಎನ್ನುವಂತೆ ವರ್ತಿಸತೊಡಗಿದರು. ಕೊಂಚ ಸಂಯಮದಿಂದ ಮತ್ತು ಪರಧರ್ಮ ಸಹಿಷ್ಣು ಭಾವನೆಯಿಂದ ಕೆಲಸ ಮಾಡಬೇಕಿತ್ತು. ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ಫಲಿತಾಂಶ ಕರ್ನಾಟಕದ ರಾಜಕೀಯದ ಮೇಲೂ ಆಗುತ್ತಿದೆ. ಎಲ್ಲೋ ಏನೋ ನಡೆಯುತ್ತಿದೆ. ಬಳ್ಳಾರಿ ಶಕ್ತಿ ಕೇಂದ್ರವಾಗುತ್ತಿರುವುದರ ಹಿಂದೆ ಪ್ರತಿಪಕ್ಷಗಳ ರಾಜಕೀಯ ತಂತ್ರವೂ ಇದೆ ಅನಿಸುತ್ತಿದೆ.
ರಾಷ್ಟ್ರಮಟ್ಟದಲ್ಲಿ ಬಿಜೆಪಿ ವರ್ಚಸ್ಸು ಪ್ರಪಾತಕ್ಕಿಳಿಯುತ್ತಿದೆ. ಅದರ ಪರಿಣಾಮ ರಾಜ್ಯಕ್ಕೂ ಆಗುತ್ತಿದೆ. ಅಲ್ಲಿ ಅಡ್ವಾಣಿ ಅವರಿಗೆ ಗೇಟ್ ಪಾಸ್ ರೆಡಿಯಾಗುತ್ತಿದೆ. ಇಲ್ಲಿ ಯಡಿಯೂರಪ್ಪ ಕುರ್ಚಿಗೆ ಗಣಿ ಧಣಿಗಳು ಬಾಂಬ್ ಕಟ್ಟಿ ಕೂತಿದ್ದಾರೆ. ಮತ್ತೊಂದು ಚುನಾವಣೆ ಬರುವುದೋ ಅಥವಾ ಮತ್ತೊಬ್ಬ ಲಿಂಗಾಯತನ ಕೈಗೇ ಸರ್ಕಾರ ಹೋಗುವುದೋ? ರಾಮುಲು ಅದೃಷ್ಟ ಖುಲಾಯಿಸಲೂಬಬುದೇನೋ!
No comments:
Post a Comment