Showing posts with label ಸಂಸ್ಕೃತಿ. Show all posts
Showing posts with label ಸಂಸ್ಕೃತಿ. Show all posts

Saturday, October 31, 2009

ರಾಜ್ಯೋತ್ಸವದ ಶುಭ ನುಡಿಗಳು....

ಭಾಷೆ ಅಂದರೆ, ಆಡುವುದು ಮತ್ತು ಬರೆಯುವುದು ಮಾತ್ರವಲ್ಲ. ಅದು ಒಟ್ಟು ಬದುಕು. ಭಾಷೆಗೆ ಸಂಬಂಧಿಸಿದಂತೆ ನಮಗೆ ಇಂಥದೊಂದು ಸಮಗ್ರ ಬದುಕಿನ ಕಲ್ಪನೆ ಇದೆ. ಉತ್ತರ, ದಕ್ಷಿಣ, ಮೂಢಣ, ತೆಂಕಣ... ಎಲ್ಲದರ ಹಂಗು ತೊರೆದ ಒಂದು ಜನಸಂಸ್ಕೃತಿ ಕಟ್ಟಬಲ್ಲ ಭಾಷೆ ನಮ್ಮ ನಿಜ ಕಾಳಜಿ. ಅದನ್ನೇ ಕನ್ನಡದಲ್ಲಿ ಕಾಣಲು ಸಾಧ್ಯವಾಗಿದೆ. ಹಾಗಾಗಿಯೇ ಕನ್ನಡರಾಜ್ಯ ಎಂದರೆ ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಉತ್ತರ, ದಕ್ಷಿಣ ಕರ್ನಾಟಕ ಮತ್ತು ಕರಾವಳಿ ಕರ್ನಾಟಕ ಆಗಲು ಸಾಧ್ಯವಿದೆ. ಈ ಭಾಷೆಗೆ ಹೀಗೆ ಎಲ್ಲ ಸೀಮೆಗಳನ್ನು ಒಳಗೊಳ್ಳುವ ಉದಾತ್ತ ಭಾವವಿದೆ.
ಕನ್ನಡ ನಮಗೆ ನೆಲದ ಭಾಷೆ, ಆಡುವ ಮತ್ತು ಬರೆಯುವ ಭಾಷೆ... ಒಟ್ಟು ಬದುಕಿನದೇ ಭಾಷೆಯಾಗಿದೆ.
ಕನ್ನಡದ ಉದಾತ್ತ ಭಾವಕ್ಕೆ ಜೀವಪರ ಆಶಯಗಳಿವೆ. ಹೀಗಾಗಿ ಇಲ್ಲಿ ವಿಜ್ಞಾನ, ತಂತ್ರಜ್ಞಾನ ಸುಪ್ತವಾಗಿ ಬೆಳೆಯಿತು. ಸಾಫ್ಟ್ ವೇರ್ ಮೂಲಕ ಕನ್ನಡದ ಗಾಳಿ ವಿಶ್ವದ ದಶದಿಕ್ಕಿಗೂ ಹಬ್ಬಿದ್ದು ಇಂಥ ಜೀವಪರ ಆಶಯದಿಂದಲೇ ಎಂದು ಬೇರೆ ಹೇಳಬೇಕಾ?
ಆದರೆ, ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಇನ್ನಷ್ಟು ಕಸುವು ತುಂಬುವ ಕೆಲಸ ಮಾತ್ರ ಅಂದುಕೊಂಡಂತೆ ಆಗುತ್ತಿಲ್ಲ. ಶಿಕ್ಷಣದ ಸ್ವರೂಪದಲ್ಲೇ ಕನ್ನಡ ಸಂಸ್ಕೃತಿ ಮತ್ತಷ್ಟು ಶಕ್ತಿಯುತವಾಗಿ ಸೇರಿಕೊಳ್ಳಬೇಕಿದೆ. ಇದು ಸರ್ಕಾರಗಳೇ ಮಾಡಬೇಕಾದ ಕೆಲಸ. ಪ್ರಜ್ಞಾವಂತರು, ಚಿಂತಕರು ಇದಕ್ಕೆ ಒತ್ತಾಸೆಯಾಗಿರಬೇಕಾಗುತ್ತದೆ.
ರಾಜ್ಯದ ಪ್ರತಿ ಪ್ರಜೆಯ ಜೀವದ್ರವ್ಯ ಕನ್ನಡ ಸಂಸ್ಕೃತಿ ಆಗಬೇಕು ಎನ್ನುವ ಇಂಥ ಮನೋಧರ್ಮ ಮತ್ತಷ್ಟು ಕಸುವು ಪಡೆದುಕೊಳ್ಳಲಿ.
ಎಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳು