Sunday, January 4, 2009

ಹೂವು

ಕಾರ್ನಾಡ್ ಸಾಹೇಬರ ರಂಗ ತೋಟದಲ್ಲಿ ಹೊಸ ಹೂವು ಅರಳಿದ್ದು ಯಾಕೊ ಅಷ್ಟು ಸುದ್ದಿಯಾಗಲಿಲ್ಲ... ಹೂವು ಅರಳುವ ಸದ್ದು ಕೇಳಸಿಕೊಂಡವರಾದರೂ ಯಾರಿದ್ದಾರೆ? ಹೂವು ಅರಳುವ ಸದ್ದು ಕೇಳಿಸದು ಆದರೆ ಅದರ ಅರಳುವ ಸೊಕ್ಕು ಮಾತ್ರ ಬೆರಗು ಹುಟ್ಟಿಸುತ್ತದೆ. ಭಾರತೀಯ ರಂಗಭೂಮಿಯ ಹೆಸರಾಂತ ನಿರ್ದೇಶಕ ಸಿ. ಬಸವಲಿಂಗಯ್ಯ ಕಾರ್ನಾಡರ ಹೂವಿಗೆ ಹೊಸ ಪರಿಮಳ ಸೇರಿಸುವ ಕೆಲಸ ಮಾಡಿದ್ದಾರೆ.



ಬೆಂಗಳೂರಿನಲ್ಲಿ ಕಳೆದ ಶನಿವಾರ ಮತ್ತು ಭಾನುವಾರ (3 ಮತ್ತು 4 ಜನವರಿ 2009) ಹೂವು ನಾಟಕದ ಪ್ರಯೋಗಗಳು ನಡೆದವು. ಒಂದು ಅದ್ಭುತ ಯತ್ನ. ಇಡೀ ಪ್ರಯೋಗ ಕಳೆಕಟ್ಟಿದ್ದು ಅದರ ವಿನ್ಯಾಸದ ದೃಷ್ಟಿಯಿಂದ. ಸ್ವತಃ ಅದ್ಭುತ ವಿನ್ಯಾಸಕಾರರೂ ಆದ ಬಸವಲಿಂಗಯ್ಯ ತಮ್ಮ ಪ್ರಯೋಗಗಳಿಗೆ ತಾವೇ ವಿನ್ಯಾಸ ರೂಪಿಸಿಕೊಳ್ಳುತ್ತಾರೆ. ಮತ್ತು ಹೆಚ್ಚಾಗಿ ಅದನ್ನು ದುಡಿಸಿಕೊಳ್ಳುತ್ತಾರೆ ಎನ್ನುವ ಆರೋಪವೂ ಇದೆ. ದೃಶ್ಯ ಮಾಧ್ಯಮದಲ್ಲಿ ಇಂಥ ವಿನ್ಯಾಸ ತುಂಬ ಮುಖ್ಯವೂ ಕೂಡ. ಕೃತಿಯ ಆಶಯಗಳಿಗೆ ಯಾವುದೇ ಧಕ್ಕೆ ತರದೇ ಅದರೊಳಗಿನ ಸಬ್ ಟೆಕ್ಸ್ಟ್ ಮೇಲೆ ಹೆಚ್ಚು ಕಣ್ಣಿಡುವ ಬಸವಲಿಂಗಯ್ಯ, ನಾಟಕದ ಒಳದನಿಗೊಂದು ಅದ್ಭುತ ಶಕ್ತಿ ತುಂಬುತ್ತಾರೆ. ಅವರ ವಿನ್ಯಾಸವೂ ಅಂಥದೇ ನಾದ ತುಂಬಿಕೊಂಡಿರುತ್ತದೆ. ಹೀಗಾಗಿ ನಾಟಕ ವಿಭಿನ್ನ ದನಿಯಾಗಿ ನಮ್ಮೊಳಕ್ಕಿಳಿಯತೊಡಗುತ್ತದೆ. ಹೂವು ರಂಗದ ಮೇಲೆ ಅರಳುವಾಗೆಲ್ಲ ಅದರ ಅಸಲಿ ಪರಿಮಳ ಪ್ರೇಕ್ಷಕನ ಹೃನ್ಮನಗಳನ್ನು ತಾಕಿ ಬಿಡುತ್ತದೆ. ಪರಿಮಳವೇನು ಬರಿ ಮೂಗಿಗಷ್ಟೇ ಸಂಬಂಧಿಸಿದ್ದೇನು! ಕಣ್ಣಿಗೂ ಪರಿಮಳ ಹೀರುವ ಶಕ್ತಿ ಇದೆ!! ಬಸವಲಿಂಗ್ಯ ಅರಳಿಸಿದ ಹೂವು ಕಣ್ಣಿಗೆ ಕಾಣುವಂಥದೇ, ಹಾಗೇ ಅದರ ಪರಿಮಳವೂ...



ಇದು ಏಕವ್ಯಕ್ತಿ ರಂಗಪ್ರಯೋಗಕ್ಕೆ ತಯಾರಾದ ನಾಟಕ. ನಾಟಕ ಆಡುವವರ ಕೊರತೆ ಇರೋದರಿಂದ ಆದಷ್ಟು ಕಮ್ಮಿ ಕ್ಯಾರೆಕ್ಟರ್ ಇರೋ ನಾಟಕ ರಚಿಸುವುದು ಈಗ ಅನಿವಾರ್ಯವೇ ಆಗಿರಬಹುದು.. ಕಾರ್ನಾಡರಿಗೂ ಅಂಥದೊಂದು ಅನಿವಾರ್ಯತೆ ಕಾಣಿಸಿಕೊಂಡಿರಲೂಬಹುದು. ಒಡಕಲು ಬಿಂಬದಂಥ ಏಕವ್ಯಕ್ತಿ ಪ್ರದರ್ಶನಕ್ಕೆ ಸೂಕ್ತವಾದ ನಾಟಕವನ್ನು ಅವರೀಗಾಗಲೇ ರಚಿಸಿದ್ದಾರೆ ಕೂಡ.
ಏಕವ್ಯಕ್ತಿ ಪ್ರದರ್ಶನಗಳು ಕನ್ನಡದಲ್ಲೂ ಇತ್ತೀಚೆಗೆ ಜಾಸ್ತಿ . ಲಕ್ಷ್ಮಿ ಚಂದ್ರಶೇಖರ್ ಮತ್ತಿತರರು ಅಂಥ ಹಲವಾರು ಯತ್ನಗಳನ್ನು ಮಾಡಿದ್ದಾರೆ. ಅವರವರ ಮಿತಿಗಳಲ್ಲಿ ಅಂಥ ಯತ್ನಗಳು ನಡೆಯುತ್ತಿರುವುದು ಎಂಥ ಬೆಳವಣಿಗೆ?
ಇಡೀ ಮನುಷ್ಯ ಸಂಬಂಧಗಳೇ ಈಗ ವ್ಯಕ್ತಿ ಕೇಂದ್ರಿತಗೊಳ್ಳುತ್ತಿವೆ. ವೈಯಕ್ತಿಕ ಬದುಕು ಈಗ ಮುಂಚಿಗಿಂತ ಹೆಚ್ಚು ಮಹತ್ವ ಪಡೆದುಕೊಂಡಿದೆ. ಇದು ಒಂದು ರೀತಿಯ ಮಾರುಕಟ್ಟೆಗಳ ತಂತ್ರವೂ ಆಗಿದೆ. ಈಗ ನಿರ್ಮಾಣಗೊಳ್ಳುತ್ತಿರುವ ಪ್ರತಿ ಪ್ರಾಡಕ್ಟ್ ಫ್ಯಾಮಿಲಿ ಪ್ಯಾಕ್ ಆಗುವುದಿಲ್ಲ, ಅದೇನಿದ್ದರೂ ವ್ಯಕ್ತಿಗತ ಆಯ್ಕೆಗೆ ಅವಕಾಶ ನೀಡುವ ಮತ್ತು ಅದನ್ನು ಬೂಸ್ಟ್ ಮಾಡುವಂಥದೇ ಆಗಿರುತ್ತವೆ.
ಮನರಂಜನಾ ಮಾಧ್ಯಮ ಕೂಡ ಇಂಥದೇ ಸರಕು ಸಂಸ್ಕೃತಿಗೆ ಒಗ್ಗಿಕೊಂಡಿದೆ. ವಿಶೇಷವಾಗಿ ಸಿನಿಮಾ, ಟಿವಿ ಸೀರಿಯಲ್, ಅಲ್ಬಂ... ಇವೆಲ್ಲ ಇಂಥದ್ದನ್ನೇ ನಂಬಿ ಬದುಕುತ್ತಿವೆ. ಎಂಟರ್ಟೇನಮೆಂಟ್ ಪ್ಯಾಕೇಜ್ ಸಂಸ್ಕೃತಿ ಈಗ ರಂಗಭೂಮಿಗೂ ಬಂದಿದೆ. ಹಾಗೆ ನೋಡಿದರೆ ನೌಟಂಕಿ ಅಥವಾ ಕಂಪನಿ ನಾಟಕಗಳು ಎಂದೋ ಇಂಥ ಪ್ಯಾಕೇಜ್ ಸಂಸ್ಕೃತಿ ಬಳಸಿಕೊಂಡಿವೆ. ಮನರಂಜನೆಯನ್ನೇ ಪ್ರಧಾನವಾಗಿಟ್ಟುಕೊಂಡ ಕಂಪನಿ ನಾಟಕಗಳು ಯಶಸ್ವಿ ಪ್ರದರ್ಶನಗಳಿಗಾಗಿ ಹಲವಾರು ತಂತ್ರಗಳನ್ನು ಬಳಸಿಕೊಳ್ಳುತ್ತಿದ್ದವು. ಒಂದು ನಾಟಕದ ವಸ್ತುವಿನ ಜತೆಗೆ ಪ್ರಾಪರ್ಟಿ, ಕಾಸ್ಟ್ಯೂಮ್ ಎಲ್ಲ ಹೊತ್ತೊಯ್ಯುವ ಕೆಲಸ ತರುವ ತಲೆನೋವಿನಿಂದ ಹೊರಬರಲು ಅವು ಮೈಥಾಲಜಿಕಲ್ ಸಬ್ಜೆಕ್ಟ್ ಬಿಟ್ಟು ಬೇರೇನನ್ನೊ ಅಳವಡಿಸಿಕೊಳ್ಳತೊಡಗಿದವು. ಅಷ್ಟೇ ಅಲ್ಲ ಕಂಪನಿ ನಾಟಕಗಳಿಗೂ ಕಲಾವಿದರ ಕೊರತೆ ಕಾಡಿತ್ತು. ವಿಶೇಷವಾಗಿ ಸ್ತ್ರೀ ಪಾತ್ರಗಳಿಗೆ ಜನ ಸಿಗುವುದು ಕಮ್ಮಿಯಾಗತೊಡಗಿದಾಗ ಹಾಗೂ ಹೆಚ್ಚು ಪಾತ್ರಗಳುಳ್ಳ ನಾಟಕಗಳಿಗೆ ಕಲಾವಿದರನ್ನು ಸೇರಿಸುವ ಮತ್ತು ಅವರನ್ನು ಸಾಕುವ ತಲೆನೋವು ಯಾಕೆ? ಎಂದುಕೊಂಡು ಪಾತ್ರಗಳು, ಆರ್ಥಿಕ ವೆಚ್ಚಗಳು ಇತ್ಯಾದಿ ಕಟ್ ಡೌನ್ ಪಾಲಿಸಿಯನ್ನು ಅವೂ ಬಳಸಿಕೊಂಡಿದ್ದಿದೆ. ಉದ್ಯಮಗಳು ದಿವಾಳಿಯಾಗುವ ಅಂಚಿಗೆ ಬಂದಾಗ ಅದರ ಮಾಲೀಕರು ಇಂಥದೇ ಕ್ರಮಗಳನ್ನು ಕೈಗೊಳ್ಳುವುದಿಲ್ಲವೇ? ಈಗಲೂ ಸಾಫ್ಟ್ ವೇರ್, ಕಾರ್ಪೋರೇಟ್ ಕಂಪನಿಗಳು ಇದನ್ನೇ ಅನುಸರಿಸುತ್ತಿಲ್ಲವೇನು?
ನಮ್ಮ ರಂಗಭೂಮಿಯೂ ಈಗ ಹಲವಾರು ಕಾಸ್ಟ್ ಕಟ್ ಡೌನ್ ತಂತ್ರಕ್ಕೆ ಮೊರೆ ಹೋಗಿದ್ದು ಸ್ವಾಭಾವಿಕ.
ಹಾಗಂತ ಕಾರ್ನಾಡರ ಹೂವು ನಾಟಕವನ್ನು ಸಮರ್ಥಿಸಿಕೊಳ್ಳುವುದು ಎಂದರ್ಥವಲ್ಲ. ಈವರೆಗಿನ ಏಕವ್ಯಕ್ತಿ ಪ್ರದರ್ಶನಗಳಿಗಿಂತ ಇದು ಭಿನ್ನವಾಗಿದೆ. ನಾಟಕ ಹೆಚ್ಚು ಪೊಯಟಿಕ್ ಆಗಿದೆ. ಕಾರ್ನಾಡರ ನಾಟಕಗಳಲ್ಲಿ ದೃಶ್ಯ ಸಾಧ್ಯತೆಗಳು ಸಾಮಾನ್ಯವಾಗಿ ಹೆಚ್ಚು. ಅವರ ಸಂಭಾಷಣೆಗಳೂ ಕೂಡ ವಿಶಿಷ್ಠವೇ. ಆದರೆ, ಟಿಪ್ಪುವಿನ ಕನಸುಗಳು ಬರುವುದಕ್ಕೂ ಮುಂಚಿನ ಎಲ್ಲ ನಾಟಕಗಳಲ್ಲಿ ಸಂಭಾಷಣೆ ಗಟ್ಟಿಯಾಗಿದ್ದಷ್ಟು ಮತ್ತು ಅರ್ಥಪೂರ್ಣವಾಗಿದ್ದಷ್ಟು ಆನಂತರದ ನಾಟಕಗಳಲ್ಲಿ ಬರಲಿಲ್ಲ. ಒಡಕಲು ಬಿಂಬದಲ್ಲೂ ಆ ಮಾಂತ್ರಿಕ ಮಾತುಗಾರಿಕೆ ಇರಲಿಲ್ಲ. ತುಘಲಕ್ ನಾಟಕದಲ್ಲಿ ಕಾಣುವ ಮೊಣಚು ಮಾತುಗಾರಿಕೆ ಇದರಲ್ಲಿ ಬರಲಿಲ್ಲ. ಹೂವು ಕೂಡ ಇದಕ್ಕೆ ಹೊರತಲ್ಲ. ಕಾರಣ ಏನು? ಇದೊಂದು ಸಾಹಿತ್ಯಿಕ ಚರ್ಚೆಯ ವಿಷಯ.
ಇನ್ನು ಪ್ರಯೋಗಕ್ಕೆ ಬರೋಣ. ಮೊದಲೇ ಹೇಳಿದ ಹಾಗೆ ಇದು ಏಕವ್ಯಕ್ತಿ ಪ್ರದರ್ಶನಕ್ಕೆ ಬರೆದ ನಾಟಕ. ಎಲ್ಲವೂ ಒಂದು ಪಾತ್ರದ ಸ್ವಗತದ ಮೂಲಕವೇ ಹೆಚ್ಚು ಹೇಳುವಂಥದು. ಅವನ ಸ್ವಗತಗಳಲ್ಲೇ ಕೆಲ ಪಾತ್ರಗಳೂ ಬಂದು ಹೋಗುತ್ತವೆ. ಅವೆಲ್ಲವು ರನಿಂಗ್ ಕಾಮೆಂಟ್ರಿ ಥರ ಅನಿಸುತ್ತದೆ. ಆದರೆ, ಈ ಮಿತಿಯನ್ನು ಬಸವಲಿಂಗಯ್ಯ ಮೀರಲು ಯತ್ನಿಸಿದ್ದು ಗಮನಾರ್ಹ. ಈ ಹಿಂದೆ ಇದನ್ನು ರಜತ್ ಕಪೂರ್ ರಂಗಪ್ರಯೋಗ ಮಾಡಿದ್ದರು. ಒಬ್ಬನೇ ಎಲ್ಲವನ್ನು ಹೇಳಲು ಯತ್ನಿಸಿ ಸೋತಿದ್ದರು. ಆ ತಪ್ಪನ್ನು ಬಸವಲಿಂಗಯ್ಯ ಈ ಪ್ರಯೋಗದಲ್ಲಿ ಸರಿಪಡಿಸಲು ನೋಡಿದ್ದಾರೆ. ಇದೊಂದು ಉತ್ತಮ ಪ್ರಯತ್ನವಾಗಿ ಕಾಣಿಸುತ್ತದೆ.
ಕೆಲವು ಸಿಂಬಲ್ ಗಳ ಮೂಲಕ ದೃಶ್ಯರೂಪ ಕಟ್ಟಲು ಯತ್ನಿಸಿದ್ದಾರೆ. ವಿಶೇಷವಾಗಿ ಕೆಲ ಧಾರ್ಮಿಕ ಸಿಂಬಲ್ ಗಳನ್ನು ಬಳಸಿಕೊಂಡಿದ್ದಾರೆ. ನಾಟಕದ ಮೂಲ ವಿಷಯವೇ ಸೆಕ್ಸ್. ಹೀಗಾಗಿ ಸಾಂಕೇತಿಕತೆಗೆ ಹೆಚ್ಚು ಒತ್ತು ನೀಡಲಾಗಿದೆ. ಸೆಕ್ಸ್ ಸಿಂಬಲ್ ಗಳನ್ನು ಕಲಾತ್ಮಕವಾಗಿ ದುಡಿಸಿಕೊಂಡಿದ್ದು ಮೆಚ್ಚುಗೆಯಾಯ್ತು.
ನಿತ್ಯ ಲಿಂಗಕ್ಕೆ ಹೂವುಗಳಿಂದ ಸಿಂಗರಿಸುತ್ತ ರಸಿಕ ಲೋಕಕ್ಕೆ ಜಾರುವ ದೇವಸ್ಥಾನದ ಪೂಜಾರಿಯೊಬ್ಬನನ್ನು ಕೇಂದ್ರವಾಗಿಟ್ಟುಕೊಂಡು ಬದುಕಿನ ಒಂದು ಸತ್ಯ ಹೇಳ ಹೊರಟಿದ್ದು ಕುತೂಹಲಕರ. ನಾವು ಮಾಡುವ ಧಾರ್ಮಿಕ ಆಚರಣೆ ಅಷ್ಟೇ ಏಕೆ ನಿತ್ಯ ಬಳಸುವ, ನೋಡುವ, ಆಡುವ... ಹೀಗೆ ಎಲ್ಲದರಲ್ಲೂ ಸೆಕ್ಸ್ ಎಲಿಮೆಂಟ್ ಇದ್ದೇ ಇರುತ್ತೆ. ಧರ್ಮದ ಸಂಕೇತಗಳಾಗಲಿ, ಬಳಸುವ ವಸ್ತುಗಳ ವಿನ್ಯಾಸವಾಗಲಿ, ಬಣ್ಣ, ಆಕಾರ ಪ್ರತಿಯೊಂದರಲ್ಲೂ ಇದು ಗುಪ್ತಗಾಮಿನಿಯಂತೆ ಸುಳಿಯುತ್ತಲೇ ಇರುತ್ತದೆ. ಜಗತ್ತಿನ ಇಂಥ ಲೌಕಿಕ ಪ್ರಪಂಚವನ್ನು, ಅಧ್ಯಾತ್ಮ, ಧಾರ್ಮಿಕ ವಿಚಾರವನ್ನು ಒಂದರ್ಥದಲ್ಲಿ ಕೆಣಕುವ ಕಾರ್ನಾಡರ ಹೂವು ನಾಟಕದ ರಂಗಪ್ರಯೋಗ ಭಾರತೀಯ ರಂಗಭೂಮಿಯಲ್ಲೊಂದು ಉತ್ತಮ ಯತ್ನ ಎನ್ನಬಹುದು.

No comments:

Post a Comment